ಬಸಳೆ ಸೊಪ್ಪಿನ ಔಷಧಿ ಗುಣಗಳು (Basella Alba)

Share this with your friends...

ಬಸಳೆಯ ಸೊಪ್ಪು ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಹಸಿರು ತರಕಾರಿಯಾಗಿದೆ. ಇದರಲ್ಲಿ ಹಲವು ಬಗೆಯ ಬಸಳೆ ಸೊಪ್ಪಿನ ವಿಧಗಳಿವೆ, ಅವುಗಳೆಂದರೆ ಹಸಿರು ಬಸಳೆ, ಕೆಂಪು ಬಸಳೆ, ನೆಲಬಸಳೆ ಇತ್ಯಾದಿ. ಬಸಳೆಯು ಒಂದು ಬಳ್ಳಿ ಜಾತಿಯ ಸಸ್ಯವಾಗಿದೆ. ಇದನ್ನು ಹಳ್ಳಿಗಳಲ್ಲಿ ಚಪ್ಪರಗಳನ್ನು ಮಾಡಿ ಬೆಳೆಸುತ್ತಾರೆ. ಇದನ್ನು ಹೆಚ್ಚಾಗಿ ನೀರು ಹರಿಯುವ ಜಾಗದಲ್ಲಿ ಬೆಳೆಸಲಾಗುತ್ತದೆ. ಇದರ ಎಲೆಗಳು ದಪ್ಪವಾಗಿರುತ್ತವೆ. ಹೂವುಗಳು ಬಿಳಿಯ ಬಣ್ಣದಾಗಿದ್ದು, ಚಿಕ್ಕದಾಗಿರುತ್ತವೆ. ಇದರ ಬೀಜಗಳಿಂದ ಹಾಗು ಕಾಂಡಗಳಿಂದಲೂ ಬಸಳೆ ಗಿಡವನ್ನು ಬೆಳೆಸಬಹುದು.

ಅಡುಗೆಯಲ್ಲಿ ಬಸಳೆಯನ್ನು ಉಪಯೋಗಿಸಿ ಸಾಂಬಾರ್, ಪಲ್ಯ, ಬಜೆ, ತಂಬುಳಿ ಹಾಗು ಸೂಪಿನಂತಹ ನಾನಾ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಇದು ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯ ಔಷಧ ಸಸ್ಯವಾಗಿದೆ. ಇದು A, B ಜೀವಸತ್ವಗಳು, ಕಬ್ಬಿಣ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳನ್ನು ಹೊಂದಿದೆ. ನಮ್ಮ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶವನ್ನು ಒದಗಿಸುವಲ್ಲಿ ಬಸಳೆಯು ಮಹತ್ವದ ಪಾತ್ರ ವಹಿಸುತ್ತದೆ. ಗರ್ಭಿಣಿಯರಿಗೆ ಇದರಿಂದ ತುಂಬಾ ಉಪಯೋಗವಿದೆ. ಬಸಳೆ ಸೊಪ್ಪು ಬೇಸಿಗೆ ಕಾಲಕ್ಕೆ ಉತ್ತಮವಾದ ತರಕಾರಿಯಾಗಿದ್ದರೂ, ಇದು ಎಲ್ಲ ಕಾಲದಲ್ಲೂ ಬೆಳೆಯುತ್ತದೆ, ಬಸಳೆಯು ಲೋಳೆಯ ಅಂಶವನ್ನು ಹೊಂದಿದ್ದು, ನಮ್ಮ ದೇಹಕ್ಕೆ ಹೆಚ್ಚು ತಂಪನ್ನು ನೀಡುತ್ತದೆ.

ಹಸಿವೆಯನ್ನು ಹೆಚ್ಚಿಸಲು ಬಸಳೆಯು ಸಹಕಾರಿ

ವಾರದಲ್ಲಿ ಮೂರರಿಂದ ನಾಲ್ಕು ದಿನ ಬಸಳೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣ ಕ್ರಿಯೆಯ ವೇಗ ಹೆಚ್ಚಾಗುತ್ತದೆ. ಆದ್ದರಿಂದ ಇದು ಹಸಿವನ್ನು ಹೆಚ್ಚಿಸುತ್ತದೆ.

ಬಾಯಿಯ ಹುಣ್ಣು ಕಡಿಮೆ ಮಾಡಲು ಬಸಳೆಯು ಉಪಯುಕ್ತ

ಬಸಳೆ ಸೊಪ್ಪು ಬಾಯಿಯ ಹುಣ್ಣಿಗೆ ಸುಲಭದ ಮನೆಮದ್ದು. ಬಸಳೆಯ ಎಲೆಯನ್ನು ಚೆನ್ನಾಗಿ ತೊಳೆದು, ಬಾಯಿಯಲ್ಲಿ ನಿಧಾನವಾಗಿ ಜಗಿದರೆ, ಅದರಲ್ಲಿರುವ ಲೋಳೆಯ ಅಂಶವು, ಬಾಯಿಯ ಹುಣ್ಣುಗಳನ್ನು ನಿವಾರಿಸುತ್ತದೆ.

ಅಂಗಾಲಿನ ಉರಿ ಕಡಿಮೆ ಮಾಡಲು ಬಸಳೆಯ ಉಪಯೋಗ

ಅಂಗಾಲಿನ ಉರಿಯನ್ನು ಕಡಿಮೆ ಮಾಡಲು, ಬಸಳೆ ಸೊಪ್ಪನ್ನು ಅರೆದು, ಆ ಮಿಶ್ರಣವನ್ನು ರಾತ್ರೆ ಮಲಗುವಾಗ ಅಂಗಾಲಿಗೆ ಹಚ್ಚಿಕೊಂಡು ಮಲಗಿದರೆ, ಅಂಗಾಲುಗಳ ಉರಿ ಕಡಿಮೆಯಾಗುತ್ತದೆ. ಹಾಗು ಕಾಲು ತಂಪಾಗಿರುತ್ತದೆ.

ಬಸಳೆ ಸೊಪ್ಪು ಕುರುವಿನ ಕೀವು ತೆಗೆಯಲು ಸಹಕಾರಿಯಾಗಿದೆ

ಬಸಳೆ ಸೊಪ್ಪನ್ನು ಅರೆದು, ಕುರುವಿನ ಮೇಲೆ ಹಚ್ಚುವುದರಿಂದ ಕುರುವಿನಲ್ಲಿನ ಕೀವು (ಕೆಟ್ಟ ರಕ್ತ) ಹೊರಗೆ ಬರುತ್ತದೆ. ಮತ್ತು ಉರಿಯೂತ ಕೂಡ ಕಡಿಮೆಯಾಗುತ್ತದೆ.

ಬಸಳೆಯಿಂದ ಮಲಬದ್ಧತೆಯ ನಿವಾರಣೆ

ಮಲಬದ್ಧತೆಯಿಂದ ಬಳಲುತ್ತಿದ್ದವರು ಬಸಳೆ ಸೊಪ್ಪಿನ ಕಷಾಯವನ್ನು ಮಾಡಿ, ಕುಡಿಯುವುದರಿಂದ ಅಥವಾ ಬಸಳೆ ಸೊಪ್ಪನ್ನು ದಿನ ನಿತ್ಯದ ಆಹಾರದಲ್ಲಿ ಬಳಸುವುದರಿಂದ, ಚಿಕ್ಕ ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿನ ಮಲಬದ್ಧತೆಯ ಸಮಸ್ಯೆಯು ಕಡಿಮೆಯಾಗುತ್ತದೆ.

ಬಸಳೆ ಸೊಪ್ಪು ಸುಟ್ಟ ಗಾಯವನ್ನು ವಾಸಿ ಮಾಡುತ್ತದೆ

ಸುಟ್ಟ ಗಾಯಗಳು ಯಾವಾಗಲೂ ತುಂಬಾ ಉರಿಯುತ್ತಿರುತ್ತವೆ. ಇದನ್ನು ಕಡಿಮೆ ಮಾಡಲು, ಬಸಳೆ ಸೊಪ್ಪಿನ ರಸ ತೆಗೆದು, ಆ ರಸಕ್ಕೆ ಬೆಣ್ಣೆ ಸೇರಿಸಿ, ಸುಟ್ಟ ಗಾಯಕ್ಕೆ ಹಚ್ಚುವುದರಿಂದ, ತಂಪಾಗಿ, ಉರಿ ಕಡಿಮೆಯಾಗುತ್ತಾ ಗಾಯವು ನಿಧಾನವಾಗಿ ವಾಸಿಯಾಗುತ್ತದೆ.

ದೇಹದ ತೂಕವನ್ನು ಹೆಚ್ಚಿಸಲು ಬಸಳೆಯು ಸಹಕಾರಿ

ಬಸಳೆ ಸೊಪ್ಪನ್ನು ವಾರದಲ್ಲಿ 3 ದಿನವಾದರೂ ಬಳಸುವುದರಿಂದ ಸರಾಗವಾಗಿ ಜೀರ್ಣಕ್ರಿಯೆಯಾಗಿ, ದೇಹವನ್ನು ಆರೋಗ್ಯವಾಗಿಡುವುದಲ್ಲದೆ, ದೇಹದ ತೂಕ ಕೂಡ ಹೆಚ್ಚುತ್ತದೆ.

ಚರ್ಮದ ಹೊಳಪಿಗೆ ಬಸಳೆ ಸೊಪ್ಪು

ಒಣ ಚರ್ಮಕ್ಕೆ ಬಸಳೆಯನ್ನು ಉಪಯೋಗಿಸಬಹುದಾಗಿದೆ. ಕೆಲವೊಮ್ಮೆ ಚರ್ಮವು ಒಣಗಿದಂತಾಗುತ್ತದೆ. ಆಗ ಬಸಳೆಯನ್ನು ಅರೆದು ಹಚ್ಚಿಕೊಳ್ಳುವುದರಿಂದ ಒಣ ಚರ್ಮವು ತನ್ನ ಹೊಳಪನ್ನು ಪುನಃ ಪಡೆದು ಕಾಂತಿಯುತವಾಗಿ ಕಾಣುತ್ತದೆ. ಜೊತೆಗೆ ಒಣ ಚರ್ಮದ ಕಾರಣದಿಂದ ತುರಿಕೆ ಉಂಟಾಗಿದ್ದರೂ ಕೂಡ ನಿವಾರಣೆಯಾಗುತ್ತದೆ.


Share this with your friends...

Leave a Comment

Your email address will not be published. Required fields are marked *